ಶನಿವಾರ, ಸೆಪ್ಟೆಂಬರ್ 6, 2014

ಅರಿವಾಗುತ್ತಿದೆ 
ಅರಿವಾಗುವ ವಿಧಿ ವಿಧಾನ
ನನಗರಿವಾದದ್ದು ಪರರಿಗದು ಮಿತವಾದರೆ
ಪರಮಾತ್ಮನಾ ಚಿತ್ತವೂ ಸಹ ದೂಷಣೆಗೆ ಅರ್ಹ 

ವಿಮರ್ಶೆಗೆಂದು ಬಂದವ
ವಾದಗಳ ವರಮಾನ ಬೇಡವೆಂದಾನೇ?
ವಾದಕ್ಕಿಳಿದ ಮನಸ್ಸು ಮುಳ್ಳಿರದ ತಕ್ಕಡಿಯಿದ್ದಂತೆ
ದೂಷಿಸಲ್ಹೊರಟವ ಈಗ ದೂಷಣೆಗೆ ಅರ್ಹ!

ನನಗೂ ನಿನಗೂ ಕಂಡ ಒಂದು
ಬೇರೊಬ್ಬನಿಗೆ ನೂರೆನಿಸಿದರೆ
ಕಂಡದ್ದನ್ನೂ,ಅನಿಸಿದ್ದನ್ನೂ ತೂಗಿ ಹಾಕಬೇಕೆ?
ಮನಸಿಗೊಮ್ಮೆ ನಾಟಿದ್ದೇ ಮೆದುಳೊರೆಗೆ ಅರಿವಾಗಿ ಬೆಳೆದದ್ದಲ್ಲವೇ!

ಆಗೆಂದೋ ನಾಟಿದ್ದು ,ಈಗೇಕೆ ಮರವಾಯಿತೆಂದು ಅನಿಸಿದರೆ
ಪ್ರಕೃತಿಗಂಟಿದ ಪ್ರಶ್ನೆಗಳಿವೆಲ್ಲಾ ಎಂದು ಅರಿವಾಗುತ್ತದೆ.
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ 
ಮುಸುಕು ಆಕೃತಿಯ ಮುರಳಿದನಿಕಂಡರೆ
ದ್ವೈತ ಮರೆತು ಐಕೈತೆಯಲಿ ಗಾನಸ್ಪರ್ಶಕಷ್ಟೇ ಸ್ಪಂದಿಸುವಾಸೆಯಾಗಿದೆ!

ಉಫ್.. ಸಮಭಾವವಿದಿದ್ದರೆ ಸಂಜೆಹೊತ್ತಿನಲಿ ಸೆಳೆದೆತ್ತೆತ್ತ ಒಯ್ಯುತಿದ್ದೆನೋ ನಾ ಕಾಣೆ!

ಜುಯ್ ಗಾಳಿಯೊಡನೆ ತೇಲಿ 
ಅಪ್ಪುವಾಸೆ ಭೋರ್ಗರೆತದಲಿ ಕೊಚ್ಚಿ ಹೋಗುವ ಮುನ್ನ ಬರಬಾರದೆ
ನಾನಿನ್ನೂ
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ..

ಶುಕ್ರವಾರ, ಸೆಪ್ಟೆಂಬರ್ 5, 2014

    ಸುಮ್ಮನೆ ಹಾಡುವುದೆಂದರೆ..

    ಹೊರಟೆ ಎಂದು ಎದ್ದು ನಿಂತವರ
ಕೈಹಿಡಿದು ಇರಲೇಬೇಕೆಂದು ಒಪ್ಪಿಸುವಾಗ ಎಚ್ಚರವಾಗಿ 
ಕನಸಲ್ಲೂ ಜೊತೆ ಇರದವನ ನಿಲುವು ನೆನೆದಾಗ 
ಅವಳ ಮುಂಬೆಳಗ ಮೌನದಲಿ ಹುಟ್ಟುವುದು..

ಒತ್ತರಿಸಿ ಕಾದು ಕನವರಿಸಿ 
ಹೊರಗೆ ಸೊಂಟ ಸವರಿ ವಿನಯದಿ 
ಒಳಗೆ ವಿರಹ ಬೇಗೆಯ ಪ್ರವಾದಿ
ಕರಾಳ ಮುಖ ಧರಿಸಿ ಆಲಿಂಗದ ಕವಡೆ 
ಮೊಗಚುವ ಪ್ರಿಯತಮನ ತೋಳಲ್ಲಿ ಹುಟ್ಟುವುದು..

ನೊಂದು ಮುದ್ದೆಯಾಗಿ 
ಬುಸುಗುಡುವ ಸತ್ತ ಕಲ್ಪನೆಗಳ 
ಕಣ್ಣಲೇ ಮತ್ತೆ ಮಲಗಿಸಿ
ಕಂಬನಿ ಇಂಗಿಸಿ ಸ್ವರ್ಗ ಸೇರಿಸುವಾಗ ಹುಟ್ಟುವುದು
..
ಸುತ್ತಲ ನಿಖಿಲ ಕ್ರಿಯೆಯು ನಿಶ್ಚಲ
ಇಂದು ಇಲ್ಲಿ ನನಗೆ ನನ್ನೊಳಗಿಂದು
ಸ್ಪುಟ ಆವೇಶ ಜೊಂಪೆ ಜಂಜಾಟ
ಆಳ ಹರಡಿದ ಪಕ್ವ ಬೇರು
ಹಣ್ಣು ಹೆರಲು ಅಲ್ಲಗಳೆದಿದೆ
ಕಾರಣ ಬರಿಯ ಗೌಣ.
ಜೋತಾಡುವ ರಕ್ಕಸ ಅಪ್ರೌಢಿಮೆಗಳು
ಬೆಳಕು ಎರಚಿ ಬಡಿದು ಕೂರಿಸುವ
ಕುಶಲತೆ ಒಲಿದಂದು ನಾನು ಪೂರ್ತಿ ಪ್ರೌಢಯಳು..
ಮಣ್ಣು ಗೊಬ್ಬರ ಹೊಂದಿ ಪುಷ್ಟಿ ಸರಿ
ಹೊಂದಿಕೆಯ ಪ್ರಕ್ರಿಯೆಯೇ ಕಹಿ
ಗಂಟಲೊಳಗಿಳಿಯದ ಗೋಪಾನಕ
ಘರ್ಷಿಸಿ ಅತ್ತು ಕರೆದು ಕಡೆಗೆ ಬೆರೆಯಲೇಬೇಕು
ಜಿಗುಟುವ ಕೈಯ ಸೋಕದ ಮೋಡದೆತ್ತರಕೆ ಬೆಳೆದು
ನೆರಳುಬಿಂಬಿಸುವ ಹೆಪ್ಪು ಮರವಾಗಲೇಬೇಕು...


ನಿಗೂಢತೆಯನ್ನರಿವ ಪ್ರಯತ್ನ 
ನಗ್ನ-ನರಳು 
ಆಗಮನ-ಅಗಲಿಕೆ 
ಪರಸ್ಪರ ಇಷ್ಟೇಕೆ ಹತ್ತಿರ!

ಮಾತಿನಲ್ಲಿ ನಟನೆಯ ಮೋಡಿ
ಹೆಚ್ಚು ಆಡಿದರೆ ಬಣ್ಣ ಕಳೆಚುವ ಭೀತಿ 
ಆಡದೆ ಮಲಗಿದಾಗ ಹುಟ್ಟಿದ್ದು 
ಕುಗ್ಗಿಸುವ ಕಣ್ಣಂಚಿನ ಬಿಸಿ ಇಬ್ಬನಿ.
ಹುಡುಕುತ್ತಿದ್ದೇನೆ ಪೂರ್ತಿ ಪ್ರಜ್ಞೆಯಲಿ 
ಜಡ ಕಟ್ಟದ ಸ್ಥಿರ ಚಿತ್ತ ಒಂದನ್ನ
ಸುಕ್ಷ್ಮತೆಯಲ್ಲಿ ಸಾವಿರಾರು ಸಲ ಮಿಂದೆದ್ದ
ಅಜ್ಞಾತ ಗುಪ್ತ ಆ ಮನ

ಆಳದಲೆಲ್ಲೋ ಹೊಮ್ಮುವ ನಾದಸ್ವರ 
ಏಕಾಗ್ರ ಅಜರ ಹಿರಿ ಬೇಲಿಯ ಸಾಂತ್ವನ
ನಾನು ನೀನೆನ್ನದ ನಿತ್ಯ ಮಿತಿ ಲಯದ 
ಸೃಷ್ಟಿಯಾಗಾಧತೆಯಲ್ಲಿ ನನ್ನದೇ ಚೇತನ