ಶನಿವಾರ, ಅಕ್ಟೋಬರ್ 18, 2014

ವರ್ಷವತಿ..

ಹೀಗೆ ಕೈಗಳ ತುಟಿಯಾಗಿಸಿ ನಿಂತುಬಿಡಬೇಕು
ಒಮ್ಮೊಮ್ಮೆ ಮಗುವಂತೆ ಬಯಲಲಿ
ಜೊಂಪು ನಿದ್ದೆಯಲು ಕಣ್ಣ ಅರಳಿಸಿ
ನನಗೆಷ್ಟು? ನನ್ನ ಕಿರು ತುಟಿಗಳ ಅಂಚಿನಿಂದ ಚಿಮ್ಮಿ ದಕ್ಕಿದ್ದು, ಭವನೆ
ನಿನಗೆಷ್ಟು? ಎಂದು ಲೆಕ್ಕಹಾಕಬೇಕು..ಮೈಮರೆತು
ಈ ವರ್ಷವತಿಯ ಮಡಿಲಲಿ
ಹೊದ್ದು ಮಲಗಿಸುವ ಸುಖದ ವಿನೋದಕಲ್ಲಾ
ಸೃಷ್ಟಿಯ ವಿಕಾಸಕ್ಕಾಗಿ.

ಬೊಗಸೆ ಹಿಡಿದ ಸಿಹಿ ನೀರಲೊಮ್ಮೆ ಮುಳುಗೆದ್ದು ಬರಬೇಕು
ಇದೇ ಪ್ರಥಮದಲಿ ತಳ ಅನ್ವೇಷಣೆಗಾಗಿ ಹೊರಟ ಮೀನಿನಂತೆ,ಅದೃಶ್ಯವಾಗಿ
ಹುಡುಕುವುದೇ ಹುಟ್ಟು ಎಂದಾಗ,ಮತ್ತೆ ಮತ್ತೆ ಹುಟ್ಟಿಬರಬೇಕು
ಗರ್ಭದೊಳಗಿನ ಭ್ರೂಣ
ಕೊಳವೂ ನಮ್ಮದೇ ,ಮೀನೂ ನಾವೇ
ತಳ ಮುಟ್ಟುವ ಆಟಕಿದೊಂದು ನೆವ ಮಾತ್ರ.

ಶನಿವಾರ, ಸೆಪ್ಟೆಂಬರ್ 6, 2014

ಅರಿವಾಗುತ್ತಿದೆ 
ಅರಿವಾಗುವ ವಿಧಿ ವಿಧಾನ
ನನಗರಿವಾದದ್ದು ಪರರಿಗದು ಮಿತವಾದರೆ
ಪರಮಾತ್ಮನಾ ಚಿತ್ತವೂ ಸಹ ದೂಷಣೆಗೆ ಅರ್ಹ 

ವಿಮರ್ಶೆಗೆಂದು ಬಂದವ
ವಾದಗಳ ವರಮಾನ ಬೇಡವೆಂದಾನೇ?
ವಾದಕ್ಕಿಳಿದ ಮನಸ್ಸು ಮುಳ್ಳಿರದ ತಕ್ಕಡಿಯಿದ್ದಂತೆ
ದೂಷಿಸಲ್ಹೊರಟವ ಈಗ ದೂಷಣೆಗೆ ಅರ್ಹ!

ನನಗೂ ನಿನಗೂ ಕಂಡ ಒಂದು
ಬೇರೊಬ್ಬನಿಗೆ ನೂರೆನಿಸಿದರೆ
ಕಂಡದ್ದನ್ನೂ,ಅನಿಸಿದ್ದನ್ನೂ ತೂಗಿ ಹಾಕಬೇಕೆ?
ಮನಸಿಗೊಮ್ಮೆ ನಾಟಿದ್ದೇ ಮೆದುಳೊರೆಗೆ ಅರಿವಾಗಿ ಬೆಳೆದದ್ದಲ್ಲವೇ!

ಆಗೆಂದೋ ನಾಟಿದ್ದು ,ಈಗೇಕೆ ಮರವಾಯಿತೆಂದು ಅನಿಸಿದರೆ
ಪ್ರಕೃತಿಗಂಟಿದ ಪ್ರಶ್ನೆಗಳಿವೆಲ್ಲಾ ಎಂದು ಅರಿವಾಗುತ್ತದೆ.
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ 
ಮುಸುಕು ಆಕೃತಿಯ ಮುರಳಿದನಿಕಂಡರೆ
ದ್ವೈತ ಮರೆತು ಐಕೈತೆಯಲಿ ಗಾನಸ್ಪರ್ಶಕಷ್ಟೇ ಸ್ಪಂದಿಸುವಾಸೆಯಾಗಿದೆ!

ಉಫ್.. ಸಮಭಾವವಿದಿದ್ದರೆ ಸಂಜೆಹೊತ್ತಿನಲಿ ಸೆಳೆದೆತ್ತೆತ್ತ ಒಯ್ಯುತಿದ್ದೆನೋ ನಾ ಕಾಣೆ!

ಜುಯ್ ಗಾಳಿಯೊಡನೆ ತೇಲಿ 
ಅಪ್ಪುವಾಸೆ ಭೋರ್ಗರೆತದಲಿ ಕೊಚ್ಚಿ ಹೋಗುವ ಮುನ್ನ ಬರಬಾರದೆ
ನಾನಿನ್ನೂ
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ..

ಶುಕ್ರವಾರ, ಸೆಪ್ಟೆಂಬರ್ 5, 2014

    ಸುಮ್ಮನೆ ಹಾಡುವುದೆಂದರೆ..

    ಹೊರಟೆ ಎಂದು ಎದ್ದು ನಿಂತವರ
ಕೈಹಿಡಿದು ಇರಲೇಬೇಕೆಂದು ಒಪ್ಪಿಸುವಾಗ ಎಚ್ಚರವಾಗಿ 
ಕನಸಲ್ಲೂ ಜೊತೆ ಇರದವನ ನಿಲುವು ನೆನೆದಾಗ 
ಅವಳ ಮುಂಬೆಳಗ ಮೌನದಲಿ ಹುಟ್ಟುವುದು..

ಒತ್ತರಿಸಿ ಕಾದು ಕನವರಿಸಿ 
ಹೊರಗೆ ಸೊಂಟ ಸವರಿ ವಿನಯದಿ 
ಒಳಗೆ ವಿರಹ ಬೇಗೆಯ ಪ್ರವಾದಿ
ಕರಾಳ ಮುಖ ಧರಿಸಿ ಆಲಿಂಗದ ಕವಡೆ 
ಮೊಗಚುವ ಪ್ರಿಯತಮನ ತೋಳಲ್ಲಿ ಹುಟ್ಟುವುದು..

ನೊಂದು ಮುದ್ದೆಯಾಗಿ 
ಬುಸುಗುಡುವ ಸತ್ತ ಕಲ್ಪನೆಗಳ 
ಕಣ್ಣಲೇ ಮತ್ತೆ ಮಲಗಿಸಿ
ಕಂಬನಿ ಇಂಗಿಸಿ ಸ್ವರ್ಗ ಸೇರಿಸುವಾಗ ಹುಟ್ಟುವುದು
..
ಸುತ್ತಲ ನಿಖಿಲ ಕ್ರಿಯೆಯು ನಿಶ್ಚಲ
ಇಂದು ಇಲ್ಲಿ ನನಗೆ ನನ್ನೊಳಗಿಂದು
ಸ್ಪುಟ ಆವೇಶ ಜೊಂಪೆ ಜಂಜಾಟ
ಆಳ ಹರಡಿದ ಪಕ್ವ ಬೇರು
ಹಣ್ಣು ಹೆರಲು ಅಲ್ಲಗಳೆದಿದೆ
ಕಾರಣ ಬರಿಯ ಗೌಣ.
ಜೋತಾಡುವ ರಕ್ಕಸ ಅಪ್ರೌಢಿಮೆಗಳು
ಬೆಳಕು ಎರಚಿ ಬಡಿದು ಕೂರಿಸುವ
ಕುಶಲತೆ ಒಲಿದಂದು ನಾನು ಪೂರ್ತಿ ಪ್ರೌಢಯಳು..
ಮಣ್ಣು ಗೊಬ್ಬರ ಹೊಂದಿ ಪುಷ್ಟಿ ಸರಿ
ಹೊಂದಿಕೆಯ ಪ್ರಕ್ರಿಯೆಯೇ ಕಹಿ
ಗಂಟಲೊಳಗಿಳಿಯದ ಗೋಪಾನಕ
ಘರ್ಷಿಸಿ ಅತ್ತು ಕರೆದು ಕಡೆಗೆ ಬೆರೆಯಲೇಬೇಕು
ಜಿಗುಟುವ ಕೈಯ ಸೋಕದ ಮೋಡದೆತ್ತರಕೆ ಬೆಳೆದು
ನೆರಳುಬಿಂಬಿಸುವ ಹೆಪ್ಪು ಮರವಾಗಲೇಬೇಕು...


ನಿಗೂಢತೆಯನ್ನರಿವ ಪ್ರಯತ್ನ 
ನಗ್ನ-ನರಳು 
ಆಗಮನ-ಅಗಲಿಕೆ 
ಪರಸ್ಪರ ಇಷ್ಟೇಕೆ ಹತ್ತಿರ!

ಮಾತಿನಲ್ಲಿ ನಟನೆಯ ಮೋಡಿ
ಹೆಚ್ಚು ಆಡಿದರೆ ಬಣ್ಣ ಕಳೆಚುವ ಭೀತಿ 
ಆಡದೆ ಮಲಗಿದಾಗ ಹುಟ್ಟಿದ್ದು 
ಕುಗ್ಗಿಸುವ ಕಣ್ಣಂಚಿನ ಬಿಸಿ ಇಬ್ಬನಿ.
ಹುಡುಕುತ್ತಿದ್ದೇನೆ ಪೂರ್ತಿ ಪ್ರಜ್ಞೆಯಲಿ 
ಜಡ ಕಟ್ಟದ ಸ್ಥಿರ ಚಿತ್ತ ಒಂದನ್ನ
ಸುಕ್ಷ್ಮತೆಯಲ್ಲಿ ಸಾವಿರಾರು ಸಲ ಮಿಂದೆದ್ದ
ಅಜ್ಞಾತ ಗುಪ್ತ ಆ ಮನ

ಆಳದಲೆಲ್ಲೋ ಹೊಮ್ಮುವ ನಾದಸ್ವರ 
ಏಕಾಗ್ರ ಅಜರ ಹಿರಿ ಬೇಲಿಯ ಸಾಂತ್ವನ
ನಾನು ನೀನೆನ್ನದ ನಿತ್ಯ ಮಿತಿ ಲಯದ 
ಸೃಷ್ಟಿಯಾಗಾಧತೆಯಲ್ಲಿ ನನ್ನದೇ ಚೇತನ
 
ಒಪ್ಪಿಗೆ ತನ್ನತನದ ಕಗ್ಗೊಲೆ
ನಾನು ನಾನಾಗದೆ ಬೇರಾರದೋ
ಕಲ್ಪನೆ ಅಡಿ ಸಿಲುಕಿ ನಲುಗುವ ಕ್ರಿಯೆ

ಅವರಿವರಿಗೆ ಇಂದು ತಪ್ಪೆನಿಸಿದರು
ಅಂದು ನನಗದು ಶಾಶ್ವತ ಸತ್ಯ
ಕರುಗುವ ಕಾಮನಬಿಲ್ಲು ವಿಚಿತ್ರವಾದರೂ
ಮುನ್ನವದು ಸ್ವರ್ಗೀಯ ಸುಂದರ ಚಿತ್ರ

ಬದಲಾವಣೆ ನವ್ಯ ಚರಿತ್ರೆಗೆ ನಾಂದಿಯಾದರೆ
ಪಾಪ ನಿವೇದನೆ ಹೊಂದಿಕೊಳ್ಳಲಾಗದ ವಾಸ್ತವಕ್ಕೆ
ನಾವು ಎಸೆಯೋ ಕಡು ಸ್ಪಷ್ಟನೆ

ಗೋಗರೆದು ತಪ್ಪೋಪ್ಪಿಸಿ
ಮತ್ತದರೊಳಗೆ ಮುಳುಗಿ ಕೊಳೆಯುವ ಬದಲು
ಮಾಡಿರುವುದ ಅರಿತು
ಬದಲಾವಣೆಯ ಮನೋಧರ್ಮ ಸಿದ್ದಿಸುವುದು ಲೇಸೆನಿಸಿದೆ


ಇನ್ನೇನು ಸಿಕ್ಕಿತೆನ್ನುವಷ್ಟರಲ್ಲಿ
ಕಂಡದೆಲ್ಲಾ ಕನಸು ಎಂಬ ವಾಸ್ತವದ ಅರಿವು 
ವ್ಯರ್ಥ ಪ್ರಯತ್ನಗಳ ಫಲವಿನರಿವಿದ್ದರು 
ಪ್ರಯತ್ನ ಅನಿವಾರ್ಯ
ಪ್ರಯೋಗಕಂಜಿದೆ ನನ್ನೊಳಗಿನ ನಾನು

ಬದುಕುವುದ ಕಲಿತೆ ಎನ್ನುವಷ್ಟರಲ್ಲಿ
ಪ್ರಪಂಚವೇ ತಿರುಚಿಮುರುಚಾಗಿ 
ಹಳೆ ಉತ್ತರಕ್ಕೆ ಹೊಸದೊಂದು ಪ್ರಶ್ನೆಯ ಹುಟ್ಟು
ನಾ ಮತ್ತಲ್ಲೇ ಬಂದು ನಿಂತೇ 
ಅಜ್ಞಾನದ ಹಾದಿಯಲಿ ಬದುಕು ಸವಿಯಲೆಂದು


ನಿರೀಕ್ಷೆಗಳಿರದು ಎಂದಿದ್ದೆ ನಾನೇ 
ಬಾಯರುವ ಮುನ್ಸೂಚನೆಯು ಸುಳಿಯದ ಹೊತ್ತು 
ಅದು ನಮ್ಮ ನಡುವೆ 

ತಿರುವು ತಿರುವಿಗೊಂದು ಹಂತ 
ಬದುಕು ನಿನ್ನ ಅವಲಂಬಿಸಿ ಹೆಣೆವ ತವಕ 
ಆ ತುದಿ ಸೇರುವ ತನಕ

ಉಸಿರ ಪರಿಮಳ ನೀನು , ಗಾಳಿಪಾಲಗದಿರು
ಕ್ಷಣ ಲಲ್ಲೆ ,ಒಣ ಮಾತು ತಂಪು ಸೆರೆ 
ಹೋಗೆಂದು ಹೇಗೆ ಹೇಳಲಿ 
ನಾಳೆ ಎಂಬುದೇ ಒಂದು ಊಹೆ 
ಇದ್ದರೂ ಇರು ಹೀಗೆ ಮಾತಿಗಾದರು ಇರಲಿ ಬೆಲೆ .

ಸಂಕಲ್ಪಕೆ ಬಿದ್ದ ಹೂ ..


ಇದ್ದಿದ್ದರೆ ಮರದಲ್ಲೇ 
ಮತ್ತಷ್ಟು ನಗುತ್ತಾ ಅರಳುತಿದ್ದೆಯೇನೋ !

ಕರಗಿ ಮಾಯವಾಗೋಣವೆಂದರೆ
ಬಿದ್ದಿರುವುದಾದರು ನುಣುಪು ಜಾರಿನ ಸೀಮೆಂಟು ನೆಲದಲ್ಲಿ
ನೆಲೆಯೂರುವ ತೃಷೆ ನಗೆಪಾಟಲಿಗೆ.
ನಗುವರ ಹಲ್ಲಿಗೆಂದೂ ಹೆದರಿಲ್ಲ
ಹೆದರಿಸಿರುವುದು ಅವರಿವರ ಬೂಟು ಚಪ್ಪಲಿಗಳ ಸದ್ದು .

ಗುಡಿ ಸೇರುವೆನೆಂದರೆ 
ಅರ್ಹತೆಯ ಮಾತಾಡಿ ಮಿಂಡೆ ಎಂದಿತು ಕಲ್ಲು ಶಿಲೆ .
ಅಳೂ
ಕರುಣೆ ಬಂದೀತು ಕಲ್ಲಿಗೆ ಎಂದರು
ರೆಪ್ಪೆಯು ಅಲುಗಲಿಲ್ಲ ಯಾಕೋ 
ರೋದನೆಯಂತು ಸೂರ್ಯ ಸಮುದ್ರದ ಅಂತರದಷ್ಟೇ
ಮೂಳೆ ಮಾಂಸದ ಅಣುವಿನೊಳಗೆ.

ಸ್ವಾಭಿಮಾನ ..

ಸಾಯುವ ಹಸಿವಿದ್ದರು
ಸ್ವಾಭಿಮಾನದ ಚಿಂತೆ
ಬಯಸಿ ಕೊಂಡ ಹಣ್ಣು 
ಹೊಟ್ಟೆ ಸೇರಿದ ತರುವಾಯ 
ತಿಂದೆ ಎನ್ನ ಕೊಲೆಗಾರ್ತಿ ಎಂದರೇ ?

ದಿನಕ್ಕೊಂದು ಎದೆಕಂಪಿಸುವ ಸವಾಲು
ಬಿಡಿಸದಿದ್ದರೆ ಕವಲೊಡೆದು 
ಎದೆ ಸೀಳಿ ಪ್ರತಿಭಟಿಸುವುದು
ಬಿಡಿಸಿದರೆ ಇನ್ನು ಮಜಬೂತು 
ನಾಳೆ ಬರುವವು

ನೂಕಿ ಭಯದ ಮಡುವಿಗೆ 
ಅವನಿಗೆನ್ನ ಅನಿಶ್ಚಿತ
ಗುರಿ ಮುಟ್ಟಿಸುವ ಹೆಬ್ಬಯಕೆ
ಕತ್ತಿಯಲಗಿನ ನಡೆಯಲ್ಲಿ
ಕಾಲು ಕೊಯ್ದು ರಕ್ತ ಸುರಿದರು 
ಕೈಚಾಚಿ ಅವನಿಗಾಗಿ
ಹೂ ಕೀಳುವ ಸ್ವಾರ್ಥ ನನಗೆ

ವಿರಹ ಜಾರಿ ಇಳೆಗೆ 
ಅನಿವಾರ್ಯದ ಕಡಲು ಸೇರಿದೆ 
ಎದೆಬಡಿತವು ತುಟಿಗೆರೆಗಳು
ಕೂಡಿಕೊಂಡ ತರುವಾಯ 
ಮಲಿನವಾಯಿತಲ್ಲೇ ಮೈಮನ ಎಂದರೇ ?


ತುಕಡಿ ..

ಚುರುಕು ಹೆಣ್ಣು ಆಕೆ,ನನ್ನಕನಸಿನಾಕೆ
ಒಲಿದರೆ ಹೊತ್ತೊಯ್ದುದು ಮುಸುರೆ ತಿಕ್ಕಲಿಡುವನು ಎಂದಳು 
ಸಲಹೆ ಕೇಳಿದಕ್ಕೆ.
*
ಪ್ರಶ್ನೆ ಕೇಳಿ 
ಅವನ ಉತ್ತರವಷ್ಟೇ ಮರುಜೀವ ನನಗೆ ಎಂಬಂತೆ ದಿಟ್ಟಿಸಿದೆ
ಬೇರೊಬ್ಬಳ ಜಡೆ ಸಂದು ನೋಡುತ್ತಾ ,ಹೋ ಎಂದವನ
ಅಷ್ಟೇ ಸಲೀಸಾಗಿ ಪ್ರಶ್ನೇ ನಿನಗಲ್ಲಾ ಎಂದೇ. 
*
ಉಗಿಯುತ್ತಿದೆ ಬೆತ್ತಲಾಗಿಸಿ
ಬಾಯ ಹೊಲಸ ಮಾಡದೆ 
ತೃಪ್ತಿ ತಾನೇ ಪಡೆದುಕೊಳ್ಳುತ್ತಿದೆ
ಅತೃಪ್ತಿಯ ಜಗಿಯುತ್ತಲಿ
ನನ್ನೊಳಗಿನ ಜೀವ ಕ್ರಿಯೇ ಇದು ಎಂದರೆ
ಇನ್ನೂ ಮುದ್ದಾದ ಹೆಸರಿಟ್ಟು ಇದನೆಲ್ಲಾ ಕವನಾವತಾರ ಎನ್ವರಲ್ಲೇ !
*

ಲುಪ್ತ ಮನಸ್ಸ ಹಾಗೆ ತೇಲಿಸಿಬಿಡುವ ಶಕ್ತಿ ಉಂಟು ಏಕಾಂತಕ್ಕೆ
ಮಾನುಷ್ಯ ಮುಖಗಳಿರುವುದಿಲ್ಲಾ,
ಗೋಜು ಗಲೀಜುಗಳ ಸುಳಿವೂ ಸಿಗುವುದಿಲ್ಲಾ
ನಿರ್ವಾಣ ಭಾವವದು, ನಿರಾಕರಿಸಲು ಮನಸ್ಸೊಪ್ಪದು..
*
ಬಿಸಾಡಿದ್ದನೆಲ್ಲಾ ಬಾಚಿ ತಿಂದೆ 
ಗೌರವವಿರಲಿ,ಅರೆಹೊಟ್ಟೆಯು ತುಂಬಲಿಲ್ಲಾ
ತಪ್ಪು ಅವನದಲ್ಲಾ
ರುಚಿ ಹಿಡಿಸಿದ್ದೆಲ್ಲಾ ಹೊಟ್ಟೆಗಿಳಿದು ಜೀರ್ಣವಾಗಿ
ನರನರವನೆಲ್ಲಾ ಸೇರಿ ಧಮನಿಗಿಳಿದು 
ಬಡಿತವಾದೀತು ಎಂದು ನಂಬಿದ್ದು ನಾನು!

*
ಅದೆಷ್ಟು ಅರಿವಿನ ಸಂಜೆ ಕಳೆದಿದ್ದೇನೆ ಅವನೊಟ್ಟಿಗೆ
ಶಬ್ದವಿರಲಿಲ್ಲಾ ,ಮೌನ ಲಹರಿಯದು 
ದೊಂಬರಾಟವಿರಲಿಲ್ಲಾ , ಧ್ಯಾನಗ್ರಸ್ಥ ನಡಿಗೆಯದು 
ಶೋಕಿಯಾಟವಿರಲಿಲ್ಲಾ , ಮರಂದ ನಗುವದು
ಬೇಡಿಕೆಗಳಿರಲಿಲ್ಲಾ ,ಹಗಲುಗನಸಿನ ಹುಡುಗನಿವನೆಂದು ನನಗು ತಿಳಿದಿತ್ತು
ಕಳೆಯಲಿದ್ದೇನೆ ಇನೆಲ್ಲಾ ಸಂಜೆ ಅವನಿಗರಿವಿಲ್ಲದೆಯೇ ಅವನೋಟ್ಟಿಗೆ, ಹೀಗೆ...

*
ಕೇಳಿದ್ದಾದರು ಏನನ್ನು !
ಅವನ ಪಾಲಿನ ನಗು ,ಉತ್ಕರ್ಷ, ಹೊನಲು 
ನನಗವನು ಕೊಟ್ಟಿದು
ನನ್ನದಲ್ಲದ ನಿಟ್ಟುಸಿರು,ಉಮ್ಮಳ,ಹೊಲಸಿನವಳು ಎಂಬ ಹಣೆ ಪಟ್ಟಿ.

* 
ಆಸೆಗಳಷ್ಟು ಜರ್ರನೆ ನೆಲ ಉರುಳುವಾಗ 
ಅವಳಿಗಾದ ಹಾನಿ ಎಷ್ಟೋ ಅನಾಹುತಗಳೆಷ್ಟೋ
ಮಡಿದ ಕ್ರೌರ್ಯಗಳು ಮಸಣ ಸೇರಲಿ ಹೀಗೆ 
ಹೂ ಮಾಲೆ ಹುಡುಕುವ ಬನ್ನಿ ,ಭೂ ತಾಯಿಗೊಂದಿಷ್ಟು ಹಿತವೆನಿಸಬಾರದೆ ..

*
ಪ್ರೀತಿಯೆಡೆಗೆ
ಬದುಕಿನ ನಿರಂತರ ಅನ್ವೇಷಣೆ
ಇದುವರೆಗೂ ದಕ್ಕದ್ದು ಮುಂದೆಯೂ ದಕ್ಕದು
ನಾನು ಕೇಳಿ ಪಡೆಯದ ವಸ್ತು
ನಿಮ್ಮದು ಮೃದುಭಾವನೆಗಳ ತುಡಿತಕೆ ವೇದಾಂತ ಹೇಳುವ ಶಿಸ್ತು

*
ಒಡಲಾಳದ ಆಸೆಗಳ ಬಯಲಿಗಿಟ್ಟ ಕೂಸು ನಾನು
ಒಂದ ಹನಿಯೂ ಬಿಡದೆ ಒಂದೊಂದನ್ನು ಹೆಕ್ಕಿ ಅನುಭವಿಸುವ ಆಸೆ ನನಗೆ
ನಗೆ ಬಿಡಿ ಹೂವ ಮುಡಿದು ಸಾಗಿರುವೆ ನಾನು
ನಗು ಬಾಡದಿರಲಿ ಅಳು ಬಾರದಿರಲೆಂಬ ಅಸ್ವಾಭಾವಿಕ ಆಸೆ ನನಗೆ

*
ದುರಂತಕ್ಕೆ ಕಾರಣ ಸಿಗದಿದ್ದಾಗ 
ಅದುವೇ ರೋಚಕ
ರೋಚಕ ಪ್ರೀತಿಯೊಳಗೆ ವಯಕ್ತಿಕತೆ ಮಾಯವಾದಾಗ 
ಅದುವೇ ದುರಂತ